ಕುರುಬ ಸಮಾಜದವರ ಜನಪದ ಕುಲಕಸಬು, ಕಾಯಕ
ಚಿತ್ರದುರ್ಗ: ಚಳ್ಳಕೆರೆ ಕಂಬಳಿ ಉದ್ಯಮ
*ಅತಿ ದೊಡ್ಡ ಕಂಬಳಿ ಮಾರುಕಟ್ಟೆ
ಮಾಲತೇಶ್ ಅರಸ್ ಹರ್ತಿಮಠ
ಚಳ್ಳಕೆರೆಯು ದಕ್ಷಿಣ ಭಾರತದ ತಮಿಳುನಾಡು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ಇರುವ ಅತಿ ದೊಡ್ಡ ಕಂಬಳಿ ಮಾರುಕಟ್ಟೆಯಾಗಿದೆ. ಆದರೆ, ಕಂಬಳಿಗಳಿಗೆ ನಿಗದಿತ ಬೆಂಬಲ ಬೆಲೆ ಇಲ್ಲ. ವಾರದ ವಹಿವಾಟಿನ ಮೇಲೆ ಬೆಲೆ ನಿಂತಿರುತ್ತದೆ. ಹೀಗಾಗಿ ನೇಕಾರರ ಸಹಕಾರಿ ಸಂಘಗಳು ಕಂಬಳಿ ತಯಾರಕರ ನೆರವಿಗೆ ಬರುವ ಅಗತ್ಯ ಇದೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವ್ಯಾಪಾರಿ ಕೇಂದ್ರ. ತೈಲ ನಗರಿಯೆಂದೇ ರಾಜ್ಯದ ಗಮನ ಸೆಳೆದಿತ್ತು. ದಶಕಗಳ ಹಿಂದೆ ನೂರಾರು ಎಣ್ಣೆ ಗಿರಣಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಈಗ ಕಂಬಳಿ ಉದ್ಯಮದಲ್ಲೂ ದೇಶದ ಗಮನಸೆಳೆಯುತ್ತಿದೆ.
ಇಲ್ಲಿನ ಕಂಬಳಿಗಳು ದಕ್ಷಿಣ ಭಾರತವಲ್ಲದೇ ಉತ್ತರ ಭಾರತದ ರಾಜ್ಯಗಳಿಗೂ ರಫ್ತಾಗುತ್ತಿವೆ. ಇದು ಚಳ್ಳಕೆರೆ ಕಂಬಳಿ ಉದ್ಯಮ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದು ಊಹಿಸಬಹುದು. ಚಳಿಗಾಲದಲ್ಲಿ ಕಂಬಳಿಗಳಿಗೆ ಬೇಡಿಕೆ ಹೆಚ್ಚು. ದಕ್ಷಿಣ ಭಾರತದ ತಮಿಳುನಾಡು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ಇರುವ ಅತಿ ದೊಡ್ಡ ಕಂಬಳಿ ಮಾರುಕಟ್ಟೆಯೆಂದರೆ ಚಳ್ಳಕೆರೆ.
ಚಳ್ಳಕೆರೆ ಮಾರುಕಟ್ಟೆಗೆ ರಾಜ್ಯದ ವಿವಿಧ ಭಾಗಗಳಲ್ಲದೆ ನೆರೆಯ ಆಂಧ್ರದಿಂದ ತರಹೇವಾರಿ ಕಂಬಳಿಗಳು, ಉಣ್ಣೆಯ ಉತ್ಪನ್ನಗಳು ಬರುತ್ತವೆ. ಇಲ್ಲಿನ ಮುಕ್ತ ಮಾರುಕಟ್ಟೆ ವ್ಯವಸ್ಥೆ ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಇಲ್ಲ. ಇದರಿಂದ ಇಲ್ಲಿನ ಮಾರುಕಟ್ಟೆಗೆ ಅಪಾರ ಬೇಡಿಕೆ ಎನ್ನುತ್ತಾರೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದ್ರಕಾಂತ್.ಆಂಧ್ರದ ಕಾಮರೆಡ್ಡಿ ಜಿಲ್ಲೆಯ ರಾಮುಡು, ನಾಗರಾಜು ಅನಿಸಿಕೆಯಂತೆ
ಜೂನ್ನಿಂದ ಆಗಸ್ಟ್ ತಿಂಗಳ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ಇಲ್ಲಿನ ಕಂಬಳಿಗಳಿಗೆ ಬೇಡಿಕೆ ಹೆಚ್ಚು. ಚಳ್ಳಕೆರೆಯ ಕಂಬಳಿಗಳಿಗೆ ಗೋವಾ, ಮಡಿಕೇರಿ, ಕೇರಳ ಎಸ್ಟೇಟ್ಗಳಲ್ಲಿ ಭಾರೀ ಬೇಡಿಕೆ ಇದೆ ಎನ್ನುತ್ತಾರೆ ಅನಂತಪುರದ ಕಂಬಳಿ ವ್ಯಾಪಾರಿ ತಿಪ್ಪೇಸ್ವಾಮಿ. ಕಂಬಳಿ ಮಾರುಕಟ್ಟೆಯ ವಹಿವಾಟು ಪ್ರತಿ ಭಾನುವಾರ ಏನಿಲ್ಲವೆಂದರೂ ರೂ.25ರಿಂದ ರೂ. 30 ಲಕ್ಷ ದಾಟುತ್ತದೆ. ಉಣ್ಣೆಯ ವಹಿವಾಟು ರೂ. 6 ಲಕ್ಷ. ಕುರಿಗಳಿಂದ ದೊರಕುವ ಉಣ್ಣೆಯನ್ನು ದೂರದ ಹರಿಯಾಣಕ್ಕೆ ಕಳುಹಿಸಿ ಅಲ್ಲಿಂದ ನೂಲನ್ನು ತರಿಸಿಕೊಳ್ಳಲಾಗುತ್ತಿದೆ.
ಕಂಬಳಿ ತಯಾರಿಕೆಗೆ ಬೇಕಾದ ಕಚ್ಚಾನೂಲನ್ನು ಮೊದಲು ಹಳ್ಳಿಗಳಲ್ಲಿ ದೊರಕುವ ಕುರಿಯ ಉಣ್ಣೆಯಿಂದ ಹಳ್ಳಿಗಳಲ್ಲಿಯೇ ತಯಾರಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಸಂಪ್ರದಾಯ ಮರೆಯಾಗಿದೆ. ಉಣ್ಣೆಯಿಂದ ಬರುವ ದೂಳು ಕ್ಯಾನ್ಸರ್ಗೆ ಕಾರಣ ವಾಗುತ್ತಿರುವುದರಿಂದ, ಹರಿಯಾಣದ ಸಿದ್ಧ ನೂಲನ್ನು ಕೊಂಡುಕೊಳ್ಳುವವರೇ ಹೆಚ್ಚು. 1 ಕೆ.ಜಿ. ಕಚ್ಚಾ ಉಣ್ಣೆಗೆ ರೂ.30 ರಿಂದ ರೂ.35 ಇದೆ. ಆದರೆ, ಸಿದ್ಧಪಡಿಸಿದ ನೂಲು ರೂ.ಕೆ.ಜಿ.ಗೆ 70 ಕಂಬಳಿ ತಯಾರಿಕೆಗೆ ಬೇಕಾದಂತಹ (ಹುಣಸೇ ಬೀಜದ) ಗಂಜಿ ಹಿಟ್ಟು ಈಗ ಸಿದ್ಧಪಡಿಸಿದಂತಹ ಮಾದರಿಯಲ್ಲಿ ದೊರೆಯುತ್ತದೆ. ಹಳ್ಳಿಗಳಲ್ಲಿ ಬೆಳಗಿನ ಜಾವ ಹುಣಸೆ ಬೀಜಗಳನ್ನು ರುಬ್ಬಿ ಗಂಜಿ ತಯಾರು ಮಾಡಿಕೊಳ್ಳುವ ದೃಶ್ಯ ಈಗ ಕಣ್ಮರೆಯಾಗಿದೆ. ಒಂದು ಕಂಬಳಿ ತಯಾರು ಮಾಡಲು 3 ಕೆ.ಜಿ. ನೂಲು 1/2 ಕೆ.ಜಿ ಗಂಜಿ ಹಿಟ್ಟು ಬೇಕು. ಜತೆಗೆ 3ರಿಂದ4 ದಿನದ ಶ್ರಮ ಅಗತ್ಯವಾಗಿ ಬೇಕು ಎನ್ನುತ್ತಾರೆ ನೇರಲಗುಂಟೆಯ ಚಂದ್ರಣ್ಣ.
ಕಂಬಳಿಗಳನ್ನು ಚಳ್ಳಕೆರೆ ತಾಲ್ಲೂಕಿನ ಗೊರ್ಲಕಟ್ಟೆ, ಚೌಳೂರು, ನೇರಲಗುಂಟೆ, ನಾಯಕನಹಟ್ಟಿ, ಗೌಡಗರೆ, ಮೊಳಕಾಲ್ಮೂರು ತಾಲ್ಲೂಕಿನ ಕೊಂಡ್ಲಹಳ್ಳಿ ಮತ್ತಿತರ ಕಡೆ ಯಥೇಚ್ಚವಾಗಿ ತಯಾರು ಮಾಡುತ್ತಾರೆ.
ವಿನ್ಯಾಸದ ಪೈಪೋಟಿ :
ಹತ್ತಿ, ಉಲ್ಲನ್ ಉತ್ಪನ್ನಗಳಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ಕಂಬಳಿ ಉದ್ಯಮದಲ್ಲೂ ಹೊಸ ವಿನ್ಯಾಸ ಕಾಣಬಹುದು. ಬಣ್ಣದ ಕುಸುರಿಯನ್ನು ಕಂಬಳಿ ತಯಾರಿಕೆಯಲ್ಲೂ ಕಾಣಬಹುದು. ನಿತ್ಯ ಬಳಕೆಯ ಟೇಬಲ್ ಕ್ಲಾತ್, ಟೋಪಿ, ದೂರವಾಣಿಗಳಿಗೆ ಬಳಸುವಂತಹ ಚಿಕ್ಕ ಹೊದಿಕೆ, ಬ್ಯಾಗ್ಗಳನ್ನೂ ಕಂಬಳಿಯಲ್ಲಿ ತಯಾರಿಸಲಾಗುತ್ತದೆ.
ಧಾರ್ಮಿಕ ಕಾರ್ಯಗಳಲ್ಲಿ ಕಂಬಳಿ:
ಧಾರ್ಮಿಕ ಕೆಲಸಗಳಲ್ಲಿ ಬಿಳಿಯ ಕಂಬಳಿಗೆ ಅಪಾರ ಬೇಡಿಕೆ. ಇದನ್ನು ಗದ್ದುಗೆ ಕಂಬಳಿಯೆಂತಲೂ ಕರೆಯುತ್ತಾರೆ.
ಯಾವುದೇ ಹಬ್ಬ ಹರಿದಿನಗಳಲ್ಲಿ ದೇವರ ಪೂಜೆ, ಶಾಸ್ತ್ರಗಳು ಕಂಬಳಿಯಿಲ್ಲದೆ ನೆರವೇರುವುದಿಲ್ಲ. ಮದುವೆ, ಜವಳ, ಕಳಶ ಸ್ಥಾಪನೆ ಮುಂತಾದ ಕಾರ್ಯಗಳಲ್ಲಿ ಶ್ವೇತವರ್ಣದ ಕಂಬಳಿ ಬೇಕೆ ಬೇಕು.
ನೇಕಾರರು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಬೆಳೆಗಳಿಗೆ ನಿಗದಿ ಪಡಿಸಿದಂತೆ ಕಂಬಳಿಗಳಿಗೆ ನಿಗದಿತ ಬೆಂಬಲ ಬೆಲೆ ಇಲ್ಲ. ವಾರದ ವಹಿವಾಟಿನ ಮೇಲೆ ಬೆಲೆ ನಿಂತಿರುತ್ತದೆ. ಕೆಲವು ವೇಳೆ ನೇಯ್ದ ಕೂಲಿಯೂ ದೊರಕದೇ ಕಂಬಳಿಯೊಂದಿಗೆ ಹಿಂತಿರುಗುವ ದೃಶ್ಯ ಸಾಮಾನ್ಯ ಎನ್ನುತ್ತಾರೆ ಚೌಳೂರಿನ ವೀರಭದ್ರಪ್ಪ, ಯಾಪಲಪರ್ತಿಯ ತಿಪ್ಪೇಸ್ವಾಮಿ.
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 27 ನೇಕಾರರ ಸಹಕಾರ ಸಂಘಗಳಿವೆ. ಅವುಗಳ ಮೂಲಕ ಬಡ ನೇಕಾರರಿಗೆ ಅವರ ಕಸುಬಿಗೆ ಅನೂಕೂಲವಾದರೆ ಕಂಬಳಿ ಉದ್ಯಮ ಮತ್ತಷ್ಟು ಚೇತರಿಕೆಯಾಗುತ್ತದೆ.
------------------------------------------------------------------
ಅರುಣ್ ..
ಗಾಂಧೀಜಿ ಜನಪದರ ವೃತ್ತಿ ಕಸಬುಗಳನ್ನೇ ಆಧರಿಸಿದ ಪುಟ್ಟ- ಪುಟ್ಟ ಕೈಗಾರಿಗೆಗಳನ್ನು ಅಭಿವೃದ್ಧಿಪಡಿಸುವ ಗುಡಿ ಕೈಗಾರಿಕೆಗಳ ಕಲ್ಪನೆಯನ್ನು ಕೊಟ್ಟರು. ಆ ಮೂಲಕ ಜನಸಾಮಾನ್ಯರು ಸ್ವಾವಲಂಬಿಗಳಾಗಿ ಬದುಕುವ ಕನಸು ಕಂಡಿದ್ದರು. ಆದರೆ, ಇಂದು ಜನಪದರ ಕಸಬುಗಳು ಕೆಲವು ಕಳೆದೇ ಹೋದವು. ಕಾರಣ ಅವುಗಳು ವರ್ತಮಾನದ ಜತೆ ಸಾವಯವ ಸಂಬಂಧ ಕಡಿದುಕೊಂಡು ಪರಕೀಯ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು.
ಇಷ್ಟೆಲ್ಲದರ ನಡುವೆ ಇನ್ನೂ ಅನೇಕ ಜನಪದ ಕುಲಕಸಬುಗಳು ಜೀವಂತವಾಗಿವೆ. ಆದರೆ, ಅವುಗಳು ಪಡೆದ ವ್ಯಾಪಕ ವಿಸ್ತಾರವನ್ನು ಕಡಿದುಕೊಂಡು ಒಂದು ಸಣ್ಣ ವಲಯದಲ್ಲಿ ಜೀವಿಸುತ್ತಿವೆ. ಅದನ್ನು ಗುರುತಿಸಿ ಅದರ ವಲಯದ ವ್ಯಾಪ್ತಿಯನ್ನು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಬೇಕಿದೆ. ಮುಖ್ಯವಾಗಿ ಆಯಾ ಕಸಬು ಯಾವ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ? ಅದನ್ನು ನಂಬಿದ ಜನರ ಬದುಕು ಹೇಗಿದೆ? ಈ ಕಸುಬಿಗೆ ಮರುಜೀವ ತುಂಬಲು ಅದನ್ನು ನಂಬಿದವರು ನಿರೀಕ್ಷಿಸುವುದೇನು? ಅದರ ಬಳಕೆಯ ವಲಯವನ್ನು ಹೆಚ್ಚಿಸಿ ಆಯಾ ಕಸಬಿಗೆ ಮರುಜೀವ ನೀಡುವ ಸಾಧ್ಯತೆಗಳೇನು? ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಬಗೆಯ ವೃತ್ತಿಕಸಬುಗಳನ್ನು ಮರು ಭೇಟಿ ಮಾಡುವ ಅಗತ್ಯವಿದೆ. ಹೀಗೆ ಚಳ್ಳಕೆರೆಯ ಕಂಬಳಿ ಉದ್ಯಮವನ್ನು ಮರು ಭೇಟಿ ಮಾಡಿ ಅದರ ಸದ್ಯದ ಸ್ಥಿತಿಯನ್ನು ಗುರುತಿಸಲು ಈ ಬರಹದಲ್ಲಿ ಪ್ರಯತ್ನಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಚಳ್ಳಕೆರೆ. ಇದೊಂದು ವಾಣಿಜ್ಯ ಪಟ್ಟಣ. ಇಲ್ಲಿ ಎಣ್ಣೆ, ಭತ್ತ ಮುಂತಾದ ಕಾರ್ಖಾನೆಗಳಿವೆ. ಎಣ್ಣೆಯ ಉದ್ಯಮಕ್ಕೆ ಹೆಚ್ಚು ಹೆಸರುವಾಸಿಯಾಗಿರುವುದರಿಂದ ಚಳ್ಳಕೆರೆಯನ್ನು ‘ಆಯಿಲ್ ಟೌನ್’ ಎಂತಲೂ ಕರೆಯುತ್ತಾರೆ. ಇಲ್ಲಿನ ದೇಸಿ ಮಾರುಕಟ್ಟೆ ಜನಸಮುದಾಯದ ವ್ಯಾಪಕ ವಿಸ್ತಾರವನ್ನು ಹೊಂದಿದೆ.
ಮುಖ್ಯವಾಗಿ ಈ ಭಾಗದಲ್ಲಿ ಕಂಬಳಿ ನೇಯುವ ಜನಪದ ಕಸಬು ಜೀವಂತವಾಗಿದೆ. ಇಂದು ಕರ್ನಾಟಕದ ಬೇರೆ- ಬೇರೆ ಭಾಗಗಳಲ್ಲಿಯೂ ಕಂಬಳಿ ನೇಯ್ಗೆ ಇದೆ. ಆದರೆ, ಅದರ ಪ್ರಮಾಣ ಮೊದಲಿಗಿಂತ ಈಗ ಕಡಿಮೆಯಾಗುತ್ತಾ ಸಾಗುತ್ತಿದೆ. ಇದು ಮೂಲತಃ ಕುರಿಸಾಕಣೆಗೆ ಹೊಂದಿಕೊಂಡಂತಹ ಉಪಕಸಬು. ಕುರಿಯ ಕೂದಲನ್ನು ಕತ್ತರಿಸಿ, ಆ ಕೂದಲಿನಿಂದ ನೂಲು ತೆಗೆದು, ಆ ನೂಲಿನಿಂದ ಕಂಬಳಿ ನೇಯುವುದು, ಆ ಕಂಬಳಿಯನ್ನು ಮಾರಾಟ ಮಾಡುವುದು ನಡೆಯುತ್ತದೆ.
ಇಂದು ಕುರಿ ಸಾಕಣೆಯ ಪ್ರಮಾಣವೇ ಕಡಿಮೆಯಾಗುತ್ತಿರುವುದರಿಂದ ಸಹಜವಾಗಿ ಅದಕ್ಕೆ ಹೊಂದಿಕೊಂಡಂತಹ ಕಂಬಳಿ ನೇಯ್ಗೆಯೂ ಮೊದಲಿಗಿಂತ ಕಡಿಮೆಯಾಗಿದೆ. ಈ ನಡುವೆಯೂ ಚಳ್ಳಕೆರೆಯಲ್ಲಿ ಕಂಬಳಿ ಉದ್ಯಮ ಪ್ರತಿ ವಾರವೂ ಹತ್ತಾರು ಲಕ್ಷಗಳ ವಹಿವಾಟು ನಡೆಸುತ್ತಿದೆ. ಈ ಉದ್ಯಮವನ್ನು ನಂಬಿ ಈ ಭಾಗದ ನೂರಾರು ಹಳ್ಳಿಗಳ ಜನರು ಕಂಬಳಿ ನೇಯುವ ಕುಲಕಸಬಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಒಂದು ನೋಟ ಇಲ್ಲಿದೆ.
ಕಂಬಳಿ ಮಾರಾಟ ಭರಾಟೆ :
ಚಳ್ಳಕೆರೆಯ ಸಂತೆಪೇಟೆಯ ಕಂಬಳಿಕಟ್ಟೆ ಎನ್ನುವ ಪ್ರದೇಶದಲ್ಲಿ ಪ್ರತಿ ಭಾನುವಾರ ಕಂಬಳಿ ಸಂತೆ ನಡೆಯುತ್ತದೆ. ಆ ದಿನ ಕಂಬಳಿ ಅಂಡಿಗೆಗಳು ಬಂದು ಇಳಿಯುತ್ತವೆ. ಒಂದೆರಡು ಕಂಬಳಿಗಳನ್ನು ನೇಯ್ದು ವಾರದ ಮನೆ ಕರ್ಚಿಗೆಂದು ಮಾರಲು ಬಂದ ಬಿಡಿ ಕಂಬಳಿದಾರರೂ ಇರುತ್ತಾರೆ. ಇಲ್ಲಿ ಸುತ್ತಮುತ್ತಲ ಹಳ್ಳಿಗಳ ಕುರಿಗಾರರು, ರೈತರು, ನೇಕಾರರು ತಾವು ನೇಯ್ದು ತಂದ ಕಂಬಳಿಗಳನ್ನು ಮಾರಾಟ ಮಾಡುತ್ತಾರೆ. ಕಂಬಳಿಯನ್ನು ಕೊಳ್ಳಲು ಆಂಧ್ರ, ಮಹಾರಾಷ್ಟ್ರ, ಹಿಮಾಚಲ, ಕಾಶ್ಮೀರ, ಅಂಡಮಾನ್- ನಿಕೋಬರ್ ಭಾಗಗಳಿಂದಲೂ ವ್ಯಾಪಾರಸ್ಥರು ಬರುತ್ತಾರೆ.
ವಿಪರ್ಯಾಸವೆಂದರೆ, ಕಂಬಳಿಯ ಬಳಕೆ ಈ ಭಾಗದಲ್ಲಿಯೇ ಕಡಿಮೆಯಾಗಿದೆ. ಹಿಮಾಲಯ, ಕಾಶ್ಮೀರ ಮುಂತಾದ ಹಿಮ- ಚಳಿ ಹೆಚ್ಚಿರುವ ಉತ್ತರ ಭಾರತದಲ್ಲಿ ಕಂಬಳಿಗೆ ದೊಡ್ಡ ಬೇಡಿಕೆ ಇದೆ. ಈ ಬೇಡಿಕೆಯನ್ನು ಆಧರಿಸಿಯೇ ಇಲ್ಲಿ ಕಂಬಳಿ ಸಂತೆ ಈಗಲೂ ಕಳೆಗಟ್ಟುತ್ತಿರುವುದು. ಉತ್ತರ ಭಾರತದ ರಾಜ್ಯಗಳ ಜನರು ಬೆಚ್ಚಗಿರಲು ಚಳ್ಳಕೆರೆ ಭಾಗದ ಕಂಬಳಿಯನ್ನು ನೆಚ್ಚಿದ್ದರಿಂದ ಕಂಬಳಿ ನೇಯ್ಗೆಯನ್ನು ನಂಬಿದ ಸಮುದಾಯಗಳ ಹೊಟ್ಟೆ ತಣ್ಣಗಿದೆ.
ನೇಕಾರರು ಸಂತೆ ಕಂಬಳಿಯನ್ನು ಎರಡು ದಿನಕ್ಕೆ ಒಂದರಂತೆ ನೇಯ್ದರೆ, ನೈಸ್ ಕಂಬಳಿಯನ್ನು ವಾರಕ್ಕೆ ಒಂದರಂತೆ ನೇಯುತ್ತಾರೆ. ಒಂದು ಕಂಬಳಿಗೆ ೩೫೦ ರೂಪಾಯಿಗಳಿಂದ ಆರಂಭವಾಗಿ, ೨೦೦೦ ರೂಪಾಯಿಗಳ ತನಕ ತಾರಾವರಿ ಬೆಲೆ ಇದೆ. ಈ ಬೆಲೆಯು ಆಯಾ ಕಂಬಳಿಯ ಗುಣಮಟ್ಟ ಮತ್ತು ಕಂಬಳಿಗೆ ಬಳಸಿದ ಉಣ್ಣೆಯ ಗುಣಮಟ್ಟವನ್ನು ಆಧರಿಸಿರುತ್ತದೆ. ಸಂತೆ ಕಂಬಳಿ ಒರಟಾಗಿದ್ದರೆ, ನೈಸ್ ಕಂಬಳಿ ತುಂಬಾ ನಯವಾಗಿಯೂ ತೆಳ್ಳಗೂ ಇರುತ್ತದೆ. ಆಧುನಿಕ ಕಾಲಮಾನಕ್ಕೆ ಒಪ್ಪುವಂತೆ ನಯವಾದ ಕಂಬಳಿಯನ್ನು ನೇಯುವ ಬದಲಾವಣೆಯೂ ಈ ನೇಯ್ಗೆಯಲ್ಲಿ ಆಗಿದೆ.
ಈ ಕಂಬಳಿ ಸಂತೆಯಲ್ಲಿ ಕೇವಲ ಕಂಬಳಿ ಮಾತ್ರ ಮಾರಾಟವಾಗುವುದಿಲ್ಲ, ಅದಕ್ಕೆ ಹೊಂದಿಕೊಂಡಂತೆ ಉಣ್ಣೆ ಮತ್ತು ಕಂಬಳಿ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಾಟವೂ ನಡೆಯುತ್ತದೆ. ಅದರಲ್ಲಿ ಮುಖ್ಯವಾಗಿ ಹುಣಸೆ ಹಿಟ್ಟು (ಸರಿ ಪುಡಿ), ದಾರ (ಬೆದ), ಬಣ್ಣ (ನೀಲಿ ಮತ್ತು ಕೆಂಪು), ಕುಂಚಿಗೆ, ಉಣ್ಣೆ ಕತ್ತರಿ ಮುಂತಾದವುಗಳ ಮಾರಾಟವೂ ನಡೆಯುತ್ತದೆ.
ಇಲ್ಲಿಗೆ ಪ್ರಮುಖವಾಗಿ ಚಳ್ಳಕೆರೆ ಸುತ್ತಮುತ್ತಲ ಗೊರಲಕಟ್ಟಿ, ನೀರಲಗುಂಟೆ, ಚೌಳೂರು, ತರಗಲಬಂಡೆ, ಕಾಮ ಸಮುದ್ರ, ದೊಡ್ಡುಳ್ಳಾರ್ತಿ, ಗಟ್ಟಪರ್ತಿ, ಓಬಳಾಪುರ, ಕೊಂಡ್ಲಹಳ್ಳಿ, ಮೊಗಲಹಳ್ಳಿ, ತಾಯಕನಹಳ್ಳಿ, ಉಡೇಂ, ಪರೆಕೋಲಮ್ಮನಹಳ್ಳಿ ಮುಂತಾದ ಹಳ್ಳಿಗಳಿಂದ ಕಂಬಳಿ ತಯಾರಕರು ಕಂಬಳಿ ಮಾರಲು ಬರುತ್ತಾರೆ.
ಕುರಿಗಾರಿಕೆ ಮತ್ತು ಕಂಬಳಿ ನೇಯ್ಗೆಯಲ್ಲಿ ಇಲ್ಲಿನ ಹಲವಾರು ಸಮುದಾಯಗಳು ಭಾಗಿಯಾಗಿವೆ. ಪ್ರಮುಖವಾಗಿ ಇದರಲ್ಲಿ ಕುರುಬರು, ಗೊಲ್ಲರು, ಬೇಡರು, ಒಕ್ಕಲಿಗರ ಸಮುದಾಯಗಳಿವೆ. ಉಣ್ಣೆ ತೆಗೆಯುವುದು, ಉಣ್ಣೆಯನ್ನು ಸ್ವಚ್ಚಗೊಳಿಸುವುದು, ನೂಲು ತೆಗೆಯುವುದು, ನೇಯುವುದರಲ್ಲಿ ಮಹಿಳೆಯರ ಭಾಗವಹಿಸುವಿಕೆ ದೊಡ್ಡ ಪ್ರಮಾಣದಲ್ಲಿದೆ. ಆದರೆ, ಇದರ ಮಾರಾಟ, ವ್ಯವಹಾರದಲ್ಲಿ ಮಾತ್ರ ಮಹಿಳೆಯರ ಪಾತ್ರ ಶೂನ್ಯ.
ಕಂಬಳಿಯ ವ್ಯಾಪಾರದಲ್ಲಿ ಪುರುಷ ಪ್ರಧಾನತೆಯೇ ಎದ್ದು ಕಾಣುತ್ತದೆ. ಕುರಿಯವರಿಂದ ನೇಕಾರರು ಕುರಿಯ ಉಣ್ಣೆಯನ್ನು ಕತ್ತರಿಸಿಕೊಂಡು ಬಂದು, ಅದಕ್ಕೆ ಬದಲಿಯಾಗಿ ಕುರಿಯವರಿಗೆ ಕಂಬಳಿಯನ್ನು ಕೊಡುವ ಪದ್ಧತಿ ಇದೆ. ಈಗೀಗ ಕುರಿಯ ಉಣ್ಣೆ ಕತ್ತರಿಸಲು ಕುರಿಯವರೇ ನೇಕಾರರಿಗೆ ಒಂದು ಕುರಿಗೆ ಎರಡು ರೂಪಾಯಿಯನ್ನು ಕೊಡುತ್ತಾರೆ. ಸ್ವಚ್ಚಗೊಂಡ ಒಂದು ಮಣ ಉಣ್ಣೆಗೆ ೩೫೦ ರಿಂದ ೪೦೦ ರೂ.ಗಳವರೆಗೆ ಬೆಲೆ ಇದೆ.
ಕಂಬಳಿ ನೇಯುವ ನೇಕಾರ ಕುಟುಂಬಗಳಿಗೆ ಸ್ವಲ್ಪಮಟ್ಟಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರ ಕಲ್ಯಾಣ ಯೊಜನೆಯಡಿ ಸಹಾಯ ದೊರೆಯುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ಹೆರಿಗೆ ಭತ್ಯೆ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಹೀಗೆ ಹಲವಾರು ಯೋಜನೆಗಳಿವೆ. ಇವುಗಳ ಸಮರ್ಥವಾದ ವಿತರಣೆಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸೌಲಭ್ಯಗಳನ್ನು ಕೂಡ ರಾಜಕೀಯವಾಗಿ ಪ್ರಬಲವಿರುವವರು ಪಡೆಯುತ್ತಾರೆ. ಹಾಗಾಗಿ ಇಲ್ಲಿಯೂ ಅಸಹಾಯಕ ನೇಕಾರರು ಸೌಲಭ್ಯಗಳನ್ನು ಪಡೆಯಲು ಇಲ್ಲದ ಹರಸಾಹಸ ಮಾಡಬೇಕಾಗಿದೆ.
ಪಟ್ಟೆ ಕಂಬಳಿಗೆ ಚೌಕಾಸಿ!
ಈ ಕಂಬಳಿ ಉದ್ಯಮವನ್ನು ಆಧರಿಸಿ ಚಳ್ಳಕೆರೆಯಲ್ಲಿ ಸರ್ಕಾರ ‘ಉಣ್ಣೆ ಉತ್ಪಾದನಾ ಮಾರಾಟ ಸಹಕಾರ ಮಹಾ ಮಂಡಳ’ವನ್ನು ಸ್ಥಾಪಿಸಿದೆ. ಈ ಮಂಡಳಿ ನೇಕಾರರಿಗೆ ಉಣ್ಣೆಯನ್ನು ಮಾರಾಟ ಮಾಡುತ್ತದೆ, ಅಂತೆಯೇ ಕಂಬಳಿಯನ್ನು ಕೊಳ್ಳುವ ಮತ್ತು ಮಾರುವ ಕೆಲಸಕ್ಕೆ ಸಹಕಾರವನ್ನೂ, ಕಂಬಳಿಗೆ ಪೂರಕವಾದ ಸಾಲ- ಸೌಲಭ್ಯಗಳನ್ನೂ ಒದಗಿಸುತ್ತದೆ. ಆದರೆ, ಅದು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನೇಕಾರರಿಗೆ ಸ್ಪಂದಿಸಿದಂತೆ ಕಾಣುವುದಿಲ್ಲ.
ಇಲ್ಲಿ ಕಂಬಳಿಯನ್ನು ಆಧರಿಸಿದ ದೊಡ್ಡ ಆಚರಣಾ ಪರಂಪರೆಯೇ ಇದೆ. ಇದರಲ್ಲಿ ಸ್ವಲ್ಪ ಬದಲಾವಣೆಯಾಗಿದೆಯಾದರೂ ಅದರ ಸಾಂಪ್ರದಾಯಿಕ ನಂಬಿಕೆಯ ಲೋಕದಲ್ಲಿ ಅಷ್ಟು ಬದಲಾವಣೆ ಆದಂತಿಲ್ಲ. ಈ ಕಂಬಳಿ ನೇಯ್ಗೆಯ ಉದ್ಯಮದಲ್ಲಿ ಯುವ ಜನತೆಯನ್ನು ಆಕರ್ಷಿಸುವಂತಹ ಗುಣ ಕಡಿಮೆ. ಅದರಲ್ಲೂ ವಿದ್ಯಾವಂತ ಯುವ ಜನತೆ ಈ ಕಂಬಳಿ ನೇಯ್ಗೆ ಉದ್ಯಮದ ಕಡೆ ಬರುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ಅಥವಾ ನಗರಗಳತ್ತ ವಲಸೆ ಹೋಗುವ ಯುವಕರನ್ನು ಕಂಬಳಿ ಉದ್ಯಮದಲ್ಲಿ ತೊಡಗಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ಈ ಕಂಬಳಿ ಉದ್ಯಮವನ್ನು ಮತ್ತಷ್ಟು ಬೆಳೆಸುವ ಸಾಧ್ಯತೆಗಳಿವೆ.
------------------------------------------------------------------------------
ಚಳಿಗಾಲ, ಮಳಗಾಲ ಹಾಗೂ ಶುಭ ಸಂದರ್ಭಗಳಲ್ಲಿ ಅಗತ್ಯವಾಗಿ ಕಪ್ಪು ಕಂಬಳಿ ಬೇಕು. ಬದಲಾದ ಕಾಲದಲ್ಲಿ ಆಧುನಿಕವಾಗಿ ಸಿಗುವ ಬಣ್ಣ ಬಣ್ಣದ ಬೆಚ್ಚನೆ ವಸ್ತ್ರಗಳಿಂದಾಗಿ ಕಪ್ಪು ಕಂಬಳಿಯನ್ನು ಜನರು ಮರೆತ್ತಿದ್ದಾರೆ. ಕುರುಬ ಸಮಾಜದವರಿಗೆ ಎಲ್ಲದಕ್ಕೂ ಬೇಕಾಗುವ ಈ ಕಂಬಳಿ ಈಗ ಜನಪ್ರಿಯತೆಯಿಂದ ಹಿಂದೆ ಸರಿಯುತ್ತಿದೆ.
ಕುರಿಗಾರರು ಕುರಿಗಳ ಉಣ್ಣೆ ಕತ್ತರಿಸಿ ಕಂಬಳಿ ನೇಯಲು ನೀಡುತ್ತಾರೆ. ಆದರೆ ಇಂದು ಈ ಉದ್ದಿಮೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಜನ ಸಿಗುತ್ತಾರೆ. ಅದರಲ್ಲೂ ರಬಕವಿ ಬನಹಟ್ಟಿ ನಗರಗಳಲ್ಲಿ ಕೇವಲ 50ಕ್ಕೂ ಹೆಚ್ಚು ಕುಟುಂಬಗಳು ಮಾತ್ರ ಉಣ್ಣೆ ಕಂಬಳಿ ನೇಯುವ ಕಾಯಕ ಅವಲಂಬಿಸಿವೆ. ಆದರೆ ಕಂಬಳಿ ಉತ್ಪಾದನೆ ವೆಚ್ಚ ಹೆಚ್ಚಿದ್ದು, ಬೇಡಿಕೆ ಇಲ್ಲದೆ ಸಾಂಪ್ರದಾಯಿಕ ಕಂಬಳಿ ನೇಯ್ಗೆ ಕಡಿಮೆಯಾಗುತ್ತಿದೆ ನೇಕಾರರು ಕಳವಳ ವ್ಯಕ್ತಪಡಿಸುತ್ತಾರೆ.
ಕಳೆದ 7, 8 ವರ್ಷಗಳಿಂದ ಮಾತ್ರ ಕಂಬಳಿ ವ್ಯಾಪಾರ ಸಂಪೂರ್ಣ ಕಡಿಮೆಯಾಗಿದ್ದು, ಹಳೆ ತಲೆಮಾರಿನ ಜನ ಮಾತ್ರ ಇದನ್ನು ಖರೀದಿಸುತ್ತಾರೆ. ಅದರಲ್ಲೂ ಪಕ್ಕದ ಕಡಪಟ್ಟಿ ಬಸವೇಶ್ವರ ಜಾತ್ರೆಯಲ್ಲಿ ಮಾತ್ರ ಅತಿ ಹೆಚ್ಚು ಕಂಬಳಿ ಮಾರಾಟವಾಗುವುದು. ನಾವು ವರ್ಷಾನು ವರ್ಷ ತಯಾರಿ ಮಾಡಿ ಇಡುತ್ತೇವೆ. ಮನೆಗೆ ಬಂದು ಕೆಲವರು ತೆಗೆದುಕೊಂಡು ಹೋಗುತ್ತಾರೆ. ಇಲ್ಲವಾದರೆ ಶ್ರಾವಣ ಮಾಸದಲ್ಲಿ ನಡೆಯುವ ಅಕ್ಕಪಕ್ಕದ ಪಟ್ಟಣಗಳ ಜಾತ್ರೆಗಳಲ್ಲಿ ಮಾರಾಟ ಮಾಡುತ್ತೇವೆ ಎಂದು ಮಲ್ಲಪ್ಪ ತುಂಗಳ ಹಾಗೂ ಸಿದ್ದಪ್ಪ ಹನಗಂಡಿ ಮತ್ತಿತರರು ಹೇಳುತ್ತಾರೆ.
ಹಲವು ವರ್ಷಗಳ ಹಿಂದೆ ಮುಂಗಾರು ಮಳೆ ಆರಂಭವಾಯಿತೆಂದರೆ ಕಂಬಳಿ. ಗೊಂಗಡಿ, ಗೊಂಚಿಗೆ ಸೇರಿದಂತೆ ಉಣ್ಣೆಯಿಂದ ಮಾಡಿದ ಇವುಗಳಿಗೆ ಭಾರೀ ಬೇಡಿಕೆ ಇರುತ್ತಿತ್ತು. ಮಳೆಗಾಲದಲ್ಲಿ ರೈತರಿಗಂತೂ ಕೃಷಿ ಚಟುವಟಿಕೆ ಸಂದರ್ಭದಲ್ಲಿ ಬೀಳುವ ತುಂತುರು ಮಳೆಗೆ ಕಂಬಳಿಯೇ ಆಸರೆಯಾಗಿತ್ತು. ಕಂಬಳಿ ಬಸಿ ಮಳೆಯಾದರೆ ಹೊಲವೆಲ್ಲ ನೀರು ಎಂಬಂತೆ, ಕುರಿಯ ಉಣ್ಣೆಯ ಕಂಬಳಿ ಚಳಿಯಲ್ಲಿ ದೇಹಕ್ಕೆ ಉಷ್ಣತೆ ನೀಡುತ್ತದೆ ಎನ್ನತ್ತಾರೆ ರೈತರು.
ಮಳೆ, ಚಳಿಯಿಂದ ರಕ್ಷಣೆ ನೀಡಿ ಬೆಚ್ಚನೆ ಅನುಭವ ನೀಡುವುದು ಕಂಬಳಿ ವಿಶೇಷ. ಕಂಬಳಿ ಗೊಂಚಿ ಹೊದ್ದ ರೈತ ಗದ್ದೆಯಲ್ಲಿ ಇಳಿದರೆ ಎಷ್ಟು ದೊಡ್ಡ ಮಳೆಯೇ ಬರಲಿ ಹೆದರುವುಲ್ಲ. ಯಾಕೆಂದರೆ ಇದು ನೀರು ಹಿಡಿಯುತ್ತದೆ ಆದರೆ ಅದನ್ನು ಹೊರಗೆ ಬಿಡುವುದಿಲ್ಲ. ಇದೇ ಇದರ ವಿಶೇಷತೆ. ಆದರೆ ಈಗ ಆಧುನಿಕತೆಗೆ ತಕ್ಕಂತೆ ಪ್ಲಾಸ್ಟಿಕ್ ಚಾಪಿ ಬಂದು ಕಂಬಳಿ ಮಾಯವಾಗಿದೆ ಎನ್ನುವುದು ನೇಕಾರರು ಅಳಲು.
ಇಲ್ಲಿ ನೇಯ್ದ ಕಂಬಳಿಗಳನ್ನು ನೆರೆಯ ವಿಜಾಪುರ ಜಿಲ್ಲೆಯ ಸಿಂದಗಿ, ಕಲಕೇರಿ, ಹೂವಿನ ಹಿಪ್ಪರಗಿ, ತೆಲಗಿ, ಬಾಗಲಕೋಟೆಯ ಮುಧೋಳ ಮತ್ತು ಪಕ್ಕದ ಮಹಾರಾಷ್ಟ್ರದ ಸಾಂಗಲಿ, ಕೊಲ್ಲಾಪುರ ಸೇರಿದಂತೆ ಅನೇಕ ನಗರಗಲ್ಲಿ ಆಗಾಗ ಮಾರಾಟ ಮಾಡಲು ಹೋಗುತ್ತೇವೆ ಎನ್ನುತ್ತಾರೆ ನೇಕಾರರು.
ಹಿಂದೆ 350 ರಿಂದ 400 ರೂ ಇದ್ದ ದರ ಈಗ ಒಂದು ಕಂಬಳಿ ಬೆಲೆ 800 ರಿಂದ ಒಂದು ಸಾವಿರ ರೂ ಏರಿದೆ. ಬೆಲೆ ಹೆಚ್ಚಾಗಿರುವುದರಿಂದ ಅದರ ಬೇಡಿಕೆಯೂ ಇಳಿದಿದೆ. ಆದರೂ ಹೊಸ ಮನೆಕಟ್ಟಿದವರು, ಹೊಸದಾಗಿ ಮದುವೆ ಮಾಡುವವರು, ದಾನ ಕೊಡುವವರು ಕಡ್ಡಾಯವಾಗಿ ಖರೀದಿ ಮಾಡುತ್ತಾರೆ ಎಂದು ನೇಕಾರರು ಹೇಳುತ್ತಾರೆ. ಕಂಬಳಿ ವ್ಯಾಪಾರಸ್ಥರಿಗೆ ಸರಕಾರ ಸಹಾಯ ಹಸ್ತ ನೀಡುವುದರ ಜೊತೆಗೆ ಉತ್ತಮ ಮಾರುಕಟ್ಟೆ ನಿರ್ಮಿಸುವಲ್ಲಿ ಸಹಾಯ ಹಸ್ತನೀಡಿದಲ್ಲಿ ಈ ಕಲೆ ಉಳಿಯಲು ಸಾಧ್ಯ.
------------------------------------------
ಕಂಬಳಿ ಮಾರಾಟಗಾರರಿಗೆ ಶುಕ್ರದೆಸೆ......
ರಭಸದ ಮಳೆ ಜೋರಾಗಿ ಬೀಳುತ್ತಿದೆ. ಇದರಿಂದ ವಾತಾವರಣವೆಲ್ಲ ತಣ್ಣಗಾಗಿದ್ದು ಚಳಿಯಿಂದ ಕೂಡಿದೆ. ಈ ಸಮಯದಲ್ಲಿ ಎಲ್ಲ ಜನರೂ ಬೆಚ್ಚಗಿನ ಹೊದಿಕೆಗಾಗಿ ಹಾತೊರೆಯುವುದು ಸಹಜ, ತಾಲೂಕಿನಲ್ಲಿ ರೈತ ಸಮುದಾಯವೇ ದೊಡ್ಡದಿದ್ದು ಗದ್ದೆ ತೋಟಗಳಲ್ಲಿ ಕೆಲಸ ಮಾಡುವಾಗಲೂ ಮೈ ಬೆಚ್ಚಗಾಗಿಸುವ ಹೊದಿಕೆಯ ಅಗತ್ಯವಿರುತ್ತದೆ. ಕಂಬಳಿ ಹಾಸಲು, ಹೊದೆಯಲು, ಮಳೆಯಿಂದ ರಕ್ಷಿಸಿಕೊಳ್ಳಲು ಅತ್ಯಂತ ಸೂಕ್ತ ವಸ್ತುವಾಗಿದ್ದು ಅನಾದಿಕಾಲದಿಂದ ರೈತರಿಗೆ ಪ್ರಿಯವಾಗಿದೆ. ಕಂಬಳಿ ಹೊದ್ದು ರೈತ ಗದ್ದೆಗೆ ಕಾಲಿಟ್ಟರೆ ಎಂಥಹ ಮಳೆಯನ್ನೂ ಲೆಕ್ಕಿಸದೇ ದುಡಿಯಲಾರಂಭಿಸುತ್ತಾನೆ. ಪ್ಲಾಸ್ಟಿಕ್ ಪೇಪರ್, ಕೊಡೆಗಳೆಲ್ಲ ಗಾಳಿಗೆ ತಡೆಯುವುದಿಲ್ಲ. ಕಂಬಳಿಯೇ ಇದಕ್ಕೆ ಸೂಕ್ತವಾಗಿದ್ದು ಈ ಕಾರಣದಿಂದಾಗಿ ರೈತರು ಈಗ ಕಂಬಳಿ ಖರೀದಿಸಲು ಮುಂದಾಗುತ್ತಿದ್ದಾರೆ.
ಕಂಬಳಿ ವ್ಯಾಪಾರಿಗಳೂ ಈಗ ಹಲವಾರು ತರದ ಕಂಬಳಿಯನ್ನು ಸಿದ್ದಪಡಿಸಿಟ್ಟುಕೊಂಡಿದ್ದು ಕಂಬಳಿ ಮಾರಾಟವೂ ಜೋರಾಗಿ ಸಾಗುತ್ತಿದೆ. ಸಾದಾ ಕಂಬಳಿಗಳಲ್ಲಿ ಎರಡು ವಿಧ, ಜಾಡಿ ಕಂಬಳಿ ಮತ್ತು ಸೂಡು ಕಂಬಳಿಗಳೆಂದು ಕರೆಯುವ ಇವುಗಳಲ್ಲಿ ಜಾಡಿ ಕಂಬಳಿಯನ್ನು ರೈತರು ಮನೆಯಲ್ಲಿ ಹಾಸಲು ಮತ್ತು ಹೊದೆಯಲು ಬಳಸುತ್ತಾರೆ. ಸೂಡು ಕಂಬಳಿಯನ್ನು ರೈತರು ಮಳೆಯಿಂದ ರಕ್ಷಿಸಿಕೊಳ್ಳಲು ಮೇಣಕಪ್ಪಡದಂತೆ ಕಡ್ಡಿ ಚುಚ್ಚಿ ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ. ಮಳೆಯಲ್ಲಿ ಕಂಬಳಿ ನೆನೆಯಬಾರದೆಂದು ಕೆಲವರು ಕಂಬಳಿಯ ಮೇಲಿಂದ ಪ್ಲಾಸ್ಟಿಕ್ ಹೊದಿಕೆ ಮಾಡಿಕೊಳ್ಳುವ ರೈತರೂ ಕಾಣಿಸಿಗುತ್ತಾರೆ.
ಕಂಬಳಿಗೂ ಕ್ರಮ ಉಂಟು ಮಳೆಯಲ್ಲಿ ಕೇವಲ ಕಂಬಳಿ ಹೊದ್ದು ಹೊಲಕ್ಕೆ ಸಾಗಿದರೆ ಮುಗಿಯಲಿಲ್ಲ. ಆಗಾಗ ಮಳೆ ಕಡಿಮೆಯಾದೊಡನೆಯೇ ಈ ಕಂಬಳಿಯನ್ನು ಬೀಸಿ ಝಾಡಿಸಬೇಕಾಗುತ್ತದೆ. ಆಗ ನೀರೆಲ್ಲ ಹೊರಸಿಡಿದು ಕಂಬಳಿ ಬೆಚ್ಚಗಿರುತ್ತದೆ. ಇಷ್ಟಕ್ಕೆ ರೈತರ ಕೆಲಸ ಮುಗಿಯುವುದಿಲ್ಲ. ಸಂಜೆ ಮನೆ ಸೇರಿದೊಡನೆ ಈ ಕಂಬಳಿಯನ್ನು ಬಿಡಿಸಿ ಬೆಂಕಿಯ ಶಾಖ ನೀಡಿ ಒಣಗಿಸಿಕೊಳ್ಳಬೇಕು. ಒಣಗಿದರೇನೇ ಮರುದಿನ ಮುಂಜಾನೆ ಪುನರ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಕಂಬಳಿಯ ಆಯುಷ್ಯವೂ ಹೆಚ್ಚುತ್ತದೆ. ಇಲ್ಲದಿದ್ದರೆ ಕಂಬಳಿ ಲಡ್ಡಾಗಿ ಬೇಗನೇ ಹರಿದು ಹೋಗುತ್ತದೆ. ರೈತರು ತಮ್ಮ ಕಂಬಳಿಯನ್ನು ಒಣಗಿಸಲೆಂದೇ '' ಹೊಡತಲು'' ಎಂದು ಕರೆಯುವ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ. ಮನೆಯ ಹೊರಗಿನ ಪಡಸಾಲೆಯಲ್ಲಿ ನಾಲ್ಕು ಗೂಟ ಹುಗಿದು ಅದರ ಮೇಲೆ ಕಂಬಳಿ ಹರಡುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಕೆಳಗಡೆ ಕೊಳ್ಳಿಯನ್ನಿಟ್ಟು ಬೆಂಕಿ ಹಚ್ಚಿ ಆ ಉರಿಯಲ್ಲಿ ಕಂಬಳಿಯನ್ನು ಒಣಗಿಸಿಕೊಳ್ಳುತ್ತಾ ಚಳಿಯಿಂದ ಮುದುಡಿದ ರೈತ ಬೆಂಕಿಯ ಶಾಖಕ್ಕೆ ಮೈವೊಡ್ಡಿ ಕುಳಿತು ಮೈಬೆಚ್ಚಗಾಗಿಸಿಕೊಳ್ಳುವಾಗ ಅವರ್ಣನೀಯ ಸುಖಾನುಭವ ಹೊಂದುತ್ತಾನೆ. ಹೊರಡಲು ಮುಂದೆ ಮೈವೊಡ್ಡಿ ಕುಳಿತುಕೊಳ್ಳಲು ಮನೆಯ ಕುಟುಂಬದ ಸದಸ್ಯರೆಲ್ಲ ಮುಂದಾಗುತ್ತಾರೆ. ಮಳೆಗಾಲ ಚಳಿಗಾಲದಲ್ಲಿ ಹಳ್ಳಿಯ ರೈತರ ಮನೆಯಲ್ಲಿ ಹೊಡತಲು ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ.
ರೈತರು ಹರಟೆ ಹೊಡೆಯುತ್ತಾ, ಗೇರು ಬೀಜ, ಹಲಸಿನ ಬೇಳೆ, ಹಲಸಿನ ಹಪ್ಪಳಗಳನ್ನು ಇಂತಹ ಹೊಡತಲು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾ ಕುಳಿತರೆಂದರೆ ಹೊತ್ತು ಸರಿದದ್ದೇ ಗೊತ್ತಾಗುವುದಿಲ್ಲ. ಹೀಗೆ ಒಂದು ಕಂಬಳಿಯ ರಕ್ಷಣೆಗೂ ರೈತರು ಹೊಸ ದಾರಿ ಕಂಡುಕೊಳ್ಳುವ ಅನಿವಾರ್ಯತೆ ಇರುತ್ತಿತ್ತು. ಇದೇ ಕಂಬಳಿಯನ್ನು ರಾತ್ರಿ ರೈತ ಹೊದ್ದು ಇಲ್ಲವೇ ಹಾಸಿಕೊಂಡು ಮಲಗಬೇಕಾಗಿತ್ತು ಬಡತನದಲ್ಲಿದ್ದ ರೈತ ಕೆಲವೊಮ್ಮೆ ತಾನು ಚಾಪೆ ಹಾಸಿಕೊಂಡು ಹೊಡತಲು ಬಳಿ ಮಲಗಿ ಒಣಗಿಸಿದ ಈ ಸೂಡು ಕಂಬಳಿಯನ್ನು ನೆಂಟರು ಬಂದಾಗ ಅವರಿಗೆ ಬಿಟ್ಟುಕೊಡಬೇಕಾಗಿತ್ತು. ಈಗ ಅಂತಹ ಪರಿಸ್ಥಿತಿಯ ಕಾಲ ಹೆಚ್ಚಿನ ರೈತರಿಗೆ ಇಲ್ಲದಿದ್ದರೂ ಕಂಬಳಿಯ ಮಹತ್ವ ಕಡಿಮೆಯಾಗಿಲ್ಲ. ಪೇಟೆಯಲ್ಲಿ ಹೊಸ ಮಾದರಿಯ ವುಲನ್ ಬ್ಲೆಂಕೆಟ್, ರಗ್ಗುಗಳು ಎಷ್ಟೇ ಬಂದಿದ್ದರೂ ಹಳ್ಳಿಯ ರೈತರಿಗೆ ಈ ಹಳೇ ಮಾದರಿಯ ಕಂಬಳಿಯೇ ಹೆಚ್ಚು ಅಚ್ಚುಮೆಚ್ಚು. ಅದಕ್ಕನುಗುಣವಾಗಿ ತಾಲೂಕಿನ ಪೇಟೆಯಲ್ಲಿ ಕಂಬಳಿಯ ವ್ಯಾಪಾರವೂ ಈ ಸಮಯದಲ್ಲೇ ಜೋರು ನೀವು ಕಂಬಳಿ ಖರೀದಿಸಿ ಹೊದ್ದು ನೋಡಿ ಇಲ್ಲವೇ ರೈತರೊಂದಿಗೆ ಹೊದೆದು ಹೊಲಕ್ಕೆ ಹೆಜ್ಜೆ ಹಾಕಿ ....
''ಕಂಬಳಿಯ ವ್ಯಾಪಾರ ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಬಲು ಕಡಿಮೆಯಾಗಿದೆ. ತಂದ ಕಂಬಳಿಗಳಲ್ಲಿ ಹೆಚ್ಚಿನವು ಮಾರಾಟಗೊಳ್ಳುವುದೇ ಇಲ್ಲ ಕೆಲವು ಹಾಳಾಗಿ ಹೋಗುತ್ತವೆ. ಕೆಲವನ್ನು ಕಂಬಳಿ ತಯಾರಿಕಾ ಘಟಕಕ್ಕೆ ವಾಪಸ್ ಕಳಿಸಬೇಕಾಗುತ್ತದೆ ಆದರೂ ಕಂಬಳಿ ಖರೀದಿಸುವವರಿದ್ದಾರೆ ಎನ್ನುವುದೇ ಸಂತಸದ ಸಂಗತಿಯಾಗಿದೆ''. - ಮಹಾಂತೇಶ ಕಂಬಳಿ ವ್ಯಾಪಾರಿ.
ಕಂಬಳಿಯ ದರ ತುಂಬಾ ದುಬಾರಿಯಾಗಿದೆ. ಹಿಂದೆ ನೂರಿನ್ನೂರು ರೂಪಾಯಿಗೆ ಸಿಗುವ ಕಂಬಳಿ ಜೋಡಿಗೆ ಈಗ ಸಾವಿರದೈನೂರು ರೂಪಾಯಿ! ಖರೀದಿಸದೆಯೂ ಬಿಡುವಂತಿಲ್ಲ. ಈಗಿನ ಕಂಬಳಿಗಳು ಹಿಂದಿನ ಕಂಬಳಿಗಳಂತೆ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂಬುದೂ ಚಿಂತೆಯ ವಿಷಯ ಬಹುಶಃ ಕಂಬಳಿಯಲ್ಲೂ ಕಲಬೆರಕೆ ಆರಂಭಗೊಂಡಿರಬಹುದೇನೋ'' ರೈತ
------------------------------------------------------------
Weaving Pretty specialist sells a wide range of woven cloth with beautiful motifs can be made as a base for your fashion that can make you look more elegant and certainly different from the others click here to purchase a wide variety of weaving gorgeous or phone/whatsapp/line 6289666626668
ReplyDelete